ಕಿರುತೆರೆಯ ಮನರಂಜನೆಯ ಮಹಾರಾಜ ಉದಯ ವಾಹಿನಿಯಲ್ಲಿ ತನ್ನದೇ ಛಾಪು ಮೂಡಿಸಿರುವ ಸೂಪರ್ಹಿಟ್ ಧಾರಾವಾಹಿ “ಕನ್ಯಾದಾನ”. ತನ್ನ ಐದು ಹೆಣ್ಣುಮಕ್ಕಳ ಜೀವನ ಸುಂದರವಾಗಿರಬೇಕು ಅಂತ ಪರಿತಪಿಸೋ ತಂದೆಯ ಭಾವನಾತ್ಮಕ ಹೋರಾಟದ ಕಥೆಯೇ “ಕನ್ಯಾದಾನ”.
ಈಗಾಗಲೇ ೬೦೦ರ ಗಡಿ ದಾಟಿ ಕನ್ನಡಿಗರ ಮನೆಮಾತಾಗಿರುವ “ಕನ್ಯಾದಾನ” ತನ್ನ ಕಥಾಹಂದರದ ಮೂಲಕ ದಿನನಿತ್ಯದ ಬದುಕಿಗೆ ಕೈಗನ್ನಡಿಯಾಗಿದೆ. ಹೆಣ್ಣಿನ ಜೀವನದ ವಿವಿಧ ಮಜಲುಗಳನ್ನು, ಗಂಡನ ಮನೆಯಲ್ಲಿ ಎದುರಿಸಬೇಕಾದ ಗೋಜಲುಗಳನ್ನು “ಕನ್ಯಾದಾನ” ಧಾರಾವಾಹಿಯು ತುಂಬಾ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದೆ. ವೀಕ್ಷಕರ ಮನರಂಜನೆಗೆ ಮೊದಲ ಆದ್ಯತೆ ನೀಡುವ ಈ ಜನಪ್ರಿಯ ಧಾರಾವಾಹಿಯಲ್ಲಿ ವಿಶೇಷ ಸಂಚಿಕೆಗಳ ಪ್ರಯೋಗ ಇದೇ ಮೊದಲೇನಲ್ಲ. ಈ ಹಿಂದೆ ಸ್ಯಾಂಡಲ್ವುಡ್ನ ಖ್ಯಾತ ನಟಿ ಸುಧಾರಾಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಧಾರಾವಾಹಿಗೆ ಮೆರುಗು ನೀಡಿದ್ದರು. ಅದೇ ರೀತಿ ಬೆಳ್ಳಿತೆರೆಯಲ್ಲಿ “ಗಾಳಿಪಟ” ಹಾರಿಸಿ ಮಿಂಚಿದ ಜನಪ್ರಿಯ ಸಿನಿತಾರೆ ನೀತು ಶೆಟ್ಟಿ ಸದ್ಯ “ಕನ್ಯಾದಾನ”ದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅನ್ಯೋನ್ಯವಾಗೇ ಬೆಳೆದ ಅಕ್ಕ-ತಂಗಿಯರಾದ ಅರ್ಚನಾ ಹಾಗೂ ದೀಪು ಮಧ್ಯೆ ಸದ್ಯ ಪ್ರತಿಷ್ಠೆಯ ಯುದ್ಧ. ಇಬ್ಬರ ನಡುವೆ ತಮ್ಮ ತಮ್ಮ ಗಂಡಂದಿರ ಸ್ವಾಭಿಮಾನದ ವಿಚಾರವಾಗಿ ಆರಂಭವಾದ ಮನಸ್ತಾಪ ಹೆತ್ತ ತಂದೆ ಅಶ್ವತ್ಥನ ಸಂತಾಪಕ್ಕೆ ಕಾರಣವಾಗಿದೆ. ಇಬ್ಬರ ಮಧ್ಯೆ ಸಂಧಾನ ಮೂಡಿಸಲು ಸಾಧ್ಯವಾಗದೇ ಬೇಸತ್ತ ಅಶ್ವತ್ಥ ಮನೆ ಬಿಟ್ಟು ಹೋಗಿದ್ದಾನೆ. ಅನ್ಯೋನ್ಯತೆ ಮರೆತಿರುವ ಮಕ್ಕಳ ವರ್ತನೆಯಿಂದ ತಂದೆಯ ನೆಮ್ಮದಿ ಶೂನ್ಯವಾಗಿದೆ.
ತಮ್ಮ ಭಾವನಾತ್ಮಕ ಸಲಹೆಗಳಿಂದ ಅರ್ಚನಾ ಹಾಗೂ ದೀಪು ಮಧ್ಯೆ ಮೂಡಿದ ಮನಸ್ತಾಪವನ್ನ ನೀತು ಹೇಗೆ ಸರಿಪಡಿಸ್ತಾರೆ, ಹೆಣ್ಣು-ಗಂಡಿನ ಜೀವನದಲ್ಲಿ ಸಾಮರಸ್ಯದ ಮಹತ್ವವನ್ನ ಹೇಗೆ ಅರ್ಥೈಸುತ್ತಾರೆ ಅನ್ನೋದೇ ಈ ವಿಶೇಷ ಸಂಚಿಕೆಗಳ ಸಾರ. ಇನ್ನು ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ನೀತು ಶೆಟ್ಟಿ ಇದೇ ಮೊದಲ ಬಾರಿಗೆ ಕಿರುತೆರೆಯ ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
“ಕನ್ಯಾದಾನ” ಧಾರಾವಾಹಿಯಲ್ಲಿನ ಪಾತ್ರಗಳು ಮದುವೆಯ ನಂತರ ಪ್ರತಿ ಹೆಣ್ಣುಮಗಳಿಗೆ ಬದುಕಿನ ಪರೀಕ್ಷೆಗಳನ್ನು ಎದುರಿಸಲು ಮನೋಸ್ಥೈರ್ಯ ತುಂಬುತ್ತವೆ. ಈ ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ನಿಜಜೀವನದಲ್ಲಿ ನೋಡುಗರಿಗೆ ತುಂಬಾ ಹತ್ತಿರವಾಗಿರುವುದರಿಂದ ಮನರಂಜನೆಯ ಜೊತೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನೂ ನೀಡುತ್ತದೆ.
“ಕನ್ಯಾದಾನ” ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ಸಂಜೆ ೬ ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.